ಗುರುವಾರ, ಆಗಸ್ಟ್ 21, 2014

ದೇವರು ಪಕ್ಷಪಾತಿಯೇ?


ಫೇಸ್ ಬುಕ್, ಬ್ಲಾಗ್ ಮತ್ತು ಇತರ ಸಾಮಾಜಿಕ ತಾಣಗಳು ಸುಜ್ಞಾನದ ಹೆಬ್ಬಾಗಿಲುಗಳು ಆಗಬೇಕು, ತನ್ಮೂಲಕ ನಮ್ಮ ತಿಳುವಳಿಕೆಯೂ ವಿಸ್ತರಿಸಬೇಕು ಎನ್ನುವುದು ನಮ್ಮೆಲ್ಲರ ಸದಾಶಯ.
ಕಗ್ಗರಸಧಾರೆಯ ಕರ್ತೃ ಶ್ರೀಯುತ. ತಿರುಮಲೈ ರವಿ ಅವರು ಪ್ರಕಟಿಸಿದ ಡಿ.ವಿ.ಜಿ ಅವರ ಕಗ್ಗದ ಭಾವಾರ್ಥ ಪೋಸ್ಟ್ ಓದಿ, ನಾನು ಬರೆದ ಕಮೆಂಟ್ ಒಂದಕ್ಕೆ ಶ್ರೀಯುತರು ಉತ್ತರಿಸುತ್ತಾ, ಉಪಯುಕ್ತ ಚರ್ಚೆಗೆ ವೇದಿಕೆಯನ್ನೂ ಕಲ್ಪಿಸಿದ್ದಾರೆ. ತಾವು ಸಹ ಮುಕ್ತವಾಗಿ ಪಾಲ್ಗೊಳ್ಳಬಹುದು.
ಅವರ ಮೂಲ ಪೋಸ್ಟ್:ರಸಧಾರೆ – ೬೪೪
ನನ್ನ ಕಮೆಂಟ್:
ನನಗೆ ಮೊದಲಿಂದಲೂ ಒಂದು ಅನುಮಾನ.
ದೇವರು ಸಾಹುಕಾರ ಪಕ್ಷಪಾತಿಯೇ ಅಂತ?
ಹೋಮ ಹವನಗಳಿಲ್ಲದೆ, ಕಾಣಿಕೆ ಬಲಿಗಳಿಲ್ಲದೆ, ರಾಶಿ ಹೂಗಳು ದೆಂಡಿ ಪ್ರಸಾದವಿಲ್ಲದೆ, ಮಣಗಟ್ಟಲೇ ಬಂಗಾರ ಮುಕುಟ ಮಣಿಗಳಿಲ್ಲದೆ.
ಸರ್ವ ದರ್ಶನದಿ ನಡೆದು ಬಂದ ಬಡ ಬಕುತನ ಕಡೆ ತಿರುಗಿಯೋ ನೋಡುವನೇ ದೇವರು?
ಶ್ರೀಯುತ. ತಿರುಮಲೈ ರವಿ ಅವರ ಪ್ರತಿಕ್ರಿಯೆ:

"ಶ್ರೀಯುತ Badarinath Palavalli ರವರು ಈ ಕೆಳಕಂಡಂತೆ ಒಂದು ಪ್ರಶ್ನೆಯನ್ನು ಕೇಳಿದ್ದರು ನನ್ನ ಬುದ್ಧಿಮತ್ತೆಗೆ ಹೊಳೆದ್ದದ್ದನ್ನು ಬರೆದಿದ್ದೇನೆ. ನಾನು ತಪ್ಪಿರಬಹುದು. ವಿದ್ವಜ್ಜನರಿಗೆ ನನ್ನು ತಿದ್ದುವ ಸಂಪೂರ್ಣ ಅಧಿಕಾರವುಂಟು.

ನನಗೆ ಮೊದಲಿಂದಲೂ ಒಂದು ಅನುಮಾನ.
ದೇವರು ಸಾಹುಕಾರ ಪಕ್ಷಪಾತಿಯೇ ಅಂತ?
ಹೋಮ ಹವನಗಳಿಲ್ಲದೆ, ಕಾಣಿಕೆ ಬಲಿಗಳಿಲ್ಲದೆ, ರಾಶಿ ಹೂಗಳು ದೆಂಡಿ ಪ್ರಸಾದವಿಲ್ಲದೆ, ಮಣಗಟ್ಟಲೇ ಬಂಗಾರ ಮುಕುಟ ಮಣಿಗಳಿಲ್ಲದೆ.
ಸರ್ವ ದರ್ಶನದಿ ನಡೆದು ಬಂದ ಬಡ ಬಕುತನ ಕಡೆ ತಿರುಗಿಯೋ ನೋಡುವನೇ ದೇವರು?

ಇಂದಿನ ಜಗತ್ತಿನಲ್ಲಿ ಸಾಮಾನ್ಯವಾಗಿ ಎಲ್ಲರಿಗೂ ಉದ್ಭವಾಗುವ ಪ್ರಶ್ನೆಯೇ ನಿಮಗೂ ಉದ್ಭವವಾಗಿದೆ. ಆದರೆ ಮೊಟ್ಟಮೊದಲಿಗೆ ನಾವು ನೋಡಬೇಕಾದದ್ದು ಅಥವಾ ಅರಿಯಬೇಕಾದದ್ದು ' ದೇವರೆಂದರೇನು' ಎಂದು. ಆ ಪ್ರಶ್ನೆಗೆ ಉತ್ತರ ಸಿಕ್ಕರೆ ನಮ್ಮ ಮಿಕ್ಕೆಲ್ಲ ಪ್ರಶ್ನೆಗಳಿಗೂ ಉತ್ತರ ಸಿಗುತ್ತದೆ. ಈ ಭೂಮಿಯಮೇಲೆ ಮನುಷ್ಯ ಕೇವಲ ಒಂದು ಪ್ರಾಣಿಯಂತೆ ಅಲೆದಾಡುತ್ತಾ ಇದ್ದ. ಎಂದೋ ಒಂದು ದಿನ, ತನಗೆ ಇಷ್ಟೆಲ್ಲಾ ವಸ್ತುಗಳು ನಾ ಕೇಳದೆಯೆ ಸಿಗುತ್ತಿವೆ, ಎಂದು ಅವನಿಗೆ ಅನ್ನಿಸಿತು. ಗಾಳಿ ಬೆಳಕು ನೀರು ಮರ ಗಿಡ ಆಹಾರ ಎಲ್ಲವೂ ತನಗೆ ಮತ್ತು ಇತರ ಪ್ರಾಣಿಗಳಿಗೂ ಸಿಗುತ್ತಿವೆ. ಸಿಗುತ್ತಿವೆ ಎಂದರೆ ಅದನ್ನು ಕೊಡಲು ಯಾರಾದರೊಬ್ಬ ಇರಬೇಕಲ್ಲವೇ. ಅವನ ಕಲ್ಪನೆಯಲ್ಲಿ, ಆ ಕೊಡುವವನನ್ನೇ 'ದೇವರು' ಎಂದ ಮುಂದೆ ಈ ಕಲ್ಪನೆ, ಭಾವನೆಯಾಗಿ, ಭಾವನೆ ನಂಬಿಕೆಯಾಗಿ , ನಂಬಿಕೆ ಶ್ರದ್ಧೆಯಾಗಿ ಮತ್ತು ಆ ಶ್ರದ್ಧೆಯೇ ಭಕ್ತಿಯ ಸ್ವರೂಪವನ್ನು ಪಡೆದಿದೆ. ಈ ಭಕ್ತಿಯೇ ನಾನಾ ವಿಧವಾದ ಸಂಸ್ಕೃತಿಗಳು, ಆಚಾರ, ವಿಚಾರ, ಸಂಪ್ರದಾಯಗಳು ಬೆಳೆಯಲಿಕ್ಕೆ ಕಾರಣವಾದವು. ಇದು ಕಲ್ಪನೆಯೇ ಆದರೂ ಈ ' ಭಕ್ತಿಯ' ಭಾವವಿಲ್ಲದ ಜಗತ್ತನ್ನು ಊಹಿಸಲೂ ಸಾಧ್ಯವಿಲ್ಲ ಅಲ್ಲವೇ?

ಎಲ್ಲಾ ಜೀವರಾಶಿಗಳಲ್ಲಿ ಉತ್ತಮವಾದುದು ' ನರ ' ರಾಶಿ. ಮಿಕ್ಕೆಲ್ಲಾ ಪ್ರಾಣಿ ಕೀಟ ಸಂಕುಲವೂ ಈ ಭೂಮಿಗೆ ಸಮಾನಾಂತರವಾಗಿದ್ದರೆ, ಮನುಷ್ಯ ಮಾತ್ರ ಭೂಮಿಗೆ ಲಂಬವಾಗಿದ್ದಾನೆ. ಇದು ಇವನ ಆಂತರಿಕವಾದ, ಊರ್ದ್ವಮುಖವಾದ ಬೆಳವಣಿಗೆಗೆ ದ್ಯೋತಕವಾಗಿದೆ. ಮನುಷ್ಯನ ಆಧ್ಯಾತ್ಮಿಕ ಪ್ರಯಾಣದಲ್ಲಿ ಮೇಲೆ ಉಲ್ಲೇಖಮಾಡಿದ, ಸಂಸ್ಕೃತಿಗಳು, ಆಚಾರ, ವಿಚಾರ, ಸಂಪ್ರದಾಯಗಳು ಎಲ್ಲವೂ ಕೇವಲ ಮೆಟ್ಟಿಲುಗಳು ಮಾತ್ರ. ಅದು ಗಮ್ಯವಲ್ಲ, ನಾವು ಸೇರಬೇಕಾದ ಮಜಲೂ ಅಲ್ಲ, ಮಹಡಿಯೂ ಅಲ್ಲ. ಆ ಪರಮಾತ್ಮನಿಂದ ಹೊರಟ ಆತ್ಮ ಮತ್ತೆ ಆ ಪರಮಾತ್ಮನನ್ನೇ ಸೇರುವ ಮಾರ್ಗದಲ್ಲಿ ಪಾರು ಮಾಡಬೇಕಾದ ಹತ್ತಾರು ಎಡರು ತೊಡರುಗಳನ್ನು ದಾಟಲು ಬೇಕಾದ ಚುಕ್ಕಾಣಿಗಳು ಮಾತ್ರ. ಆ ಪರಮಾತ್ಮನಲ್ಲಿ ಲೀನವಾಗುವುದೇ ಎಲ್ಲಾ ಜೀವಿಗಳ ಉದ್ದೇಶ್ಯ.

ಇಲ್ಲಿ ನೀವು ' ದೇವರು ಪಕ್ಷಪಾತಿ' ಯೇ ಕೇಳಿದ್ದೀರಿ. ಮೂಲರೂಪದಲ್ಲಿ ಅವನು ಪಕ್ಷಪಾತಿಯಾಗಿರಲು ಸಾಧ್ಯವೇ ಇಲ್ಲ. ಏಕೆಂದರೆ ಅವನೇ ಎಲ್ಲವೂ ಪ್ರಕಟವಾಗಿರುವಾಗ, ಎಲ್ಲವೂ ಅವನಿಂದಲೇ ಆಗಿರುವಾಗ ಅಥವಾ ಅವನೇ ಈ ಜಗತ್ತನ್ನು ಸೃಷ್ಟಿಸಿ ಎಲ್ಲ ರೂಪಗಳನ್ನೂ ತಾನೇ ಎಲ್ಲವನ್ನೂ ಅನುಭವಿಸುತ್ತಿರುವಾಗ ಅವನು ಪಕ್ಷಪಾತಿಯಾಗಿರಲು ಸಾಧ್ಯವೇ ಇಲ್ಲ. ನಮ್ಮ ಅಪೇಕ್ಷೆಯ ವ್ಯತ್ಯವೇ ನಮಗೆ ಸಿಗುವ ಫಲಗಳ ವ್ಯತ್ಯಯಕ್ಕೆ ಕಾರಣ. ಎಲ್ಲ ಪ್ರಾಣಿಗಳೂ ಅವರವರ ಪೂರ್ವ ಕರ್ಮದನುಸಾರವಾಗಿ ಏನನ್ನು ಪಡೆಯಬೇಕೋ, ಎಷ್ಟನ್ನು ಪಡೆಯಬೇಕೋ ಮತ್ತು ಯಾವಾಗ ಪಡೆಯಬೇಕೋ ಆಯಾಯಾ ಸಮಯಕ್ಕೆ ಅಷ್ಟಷ್ಟನ್ನು ಪಡೆಯುತ್ತದೆ.

ಆದರೆ ನಮಗೆ ನಮ್ಮ ಪೂರ್ವ ಕರ್ಮದ ಮತ್ತು ತತ್ ಪರಿಣಾಮವಾಗಿ ನಮಗೆ ಸಿಗುವ ಫಲಗಳ ಪರಿಚಯವಿಲ್ಲವಾದ್ದರಿಂದ ನಮ್ಮ ಅಪೇಕ್ಷೆಗೆ ವಿರುದ್ಧವಾಗಿ ಅಥವಾ ವ್ಯತ್ಯಾಸವಾಗಿ ನಮಗೆ ಫಲಗಳು ಸಿಗುತ್ತವೆ. ನಾವು ಬಯಸಿದ ಫಲ ಸಿಗದೇ ಹೋದರೆ ಸಿಕ್ಕವರನ್ನು ಕಂಡು ಕರುಬುತ್ತೇವೆ, ಅಸೂಯೆ ಪಡುತ್ತೇವೆ ಮತ್ತು ಆ ದೇವರು ' ಪಕ್ಷಪಾತಿ' ಎಂದು ಆ 'ದೇವರ'ನ್ನೇ ಜರೆಯುತ್ತೇವೆ.

ಆದರೆ ಆ ದೇವರು ಎಂದಿಗೂ ಪಕ್ಷಪಾತಿಯಲ್ಲ. ಅದು ಕೇವಲ ನಮ್ಮ ಭ್ರಮೆ ಅಷ್ಟೇ.

ಇನ್ನು ನಿಮ್ಮ ಪ್ರಶ್ನೆಯು ಇಂದಿನ ಸಮಾಜದಲ್ಲಿ ದೇವಾಲಯಗಳಲ್ಲಿ ನಡೆಯುತ್ತಿರುವ ವಿಧ್ಯಾಮಾನವನ್ನು ಕುರಿತು ಎಂದು ವಿಶ್ಲೇಷಣೆ ಮಾಡಿದರೆ, ನನಗೆ ಹೇಗನ್ನಿಸುತ್ತದೆ. ದೇವಾಲಯಗಳಲ್ಲಿ ಪೂಜೆಗಳಿಗೆ ನಿಯಮಿಸಲ್ಪಟ್ಟ ಅರ್ಚಕರು ಮತ್ತು ಪೂಜಾರಿಗಳೂ ನಮ್ಮಂತೆಯೇ ಮನುಷ್ಯರಲ್ಲವೇ? ಅವರೇನು ದೇವಲೋಕದಿಂದ ಇಳಿದು ಬಂದಿಲ್ಲವಲ್ಲ. ಅವರುಗಳು ಅವರ ಪೂರ್ವ ಕರ್ಮದಂತೆ ಆ ವೃತ್ತಿಯಲ್ಲಿದ್ದಾರೆ. ಅವರಿಗೂ 'ಬೇಕು' ಗಳು ಇರುತ್ತವೆ ಅವುಗಳನ್ನು ಪೂರೈಸಿಕೊಳ್ಳಲು ಅವರೂ ಸಹ ಪಕ್ಷಪಾತವನ್ನು ಮಾಡುತ್ತಾರೆ. ಆದರೆ ಅದು ದೇವರು ಮಾಡುವ ಪಕ್ಷಪಾತವೆಂದು ತಿಳಿಯಬಾರದು. ದೇವಾಲಯಕ್ಕೆ ಕೇವಲ ಭಕ್ತಿಗಾಗಿ ಹೋಗಬೇಕು. ಅಲ್ಲಿಗೆ ಬರುವ ಭಕ್ತರ ಸಮೂಹದ 'ಭಕ್ತಿಯ' ತರಂಗಗಳಿಂದ ಆ ಸ್ಥಳದಲ್ಲಿ ಇರುವ ಪ್ರಭಾವ ನಮ್ಮ ಮೇಲೂ ಬೀರಿ ನಮ್ಮ ಮನಸ್ಸೂ ಭಕ್ತಿವಶವಾಗಲಿ ಎಂದು ಅಪೇಕ್ಷೆ ಪಡಬೇಕು. ಆದರೆ ಭಕ್ತಿಯೇ ಇಲ್ಲದೆ ದೇವಾಲಯಗಳಲ್ಲಿ ಕೇವಲ ಡಾಂಬಿಕತೆಗೆ ಪೂಜೆ, ಅರ್ಚನೆ, ಅಭಿಷೇಕ, ಕಲ್ಯಾಣೋತ್ಸವ ಮುಂತಾದವುಗಳನ್ನು ಮಾಡಿಸಿ ಬೀಗುವವವರನ್ನು ಕಂಡು ದೇವರು ಪಕ್ಷಪಾತಿಯೇ ಎನ್ನುವುದು ಸರಿಯಲ್ಲ. 'ಉಳ್ಳವರು ಶಿವಾಲಯ ಮಾಡುವರು' ಎಂದು ಬಸವಣ್ಣನವರು ಹೇಳುತ್ತಾ ' ಎನ್ನ ಕಾಲೇ ಕಂಬವಯ್ಯ, ಎನ್ನಾ ದೇಹವೆ ದೇಗುಲವಯ್ಯ ಶಿರವೇ ಹೊನ್ನ ಕಳಸವಯ್ಯಾ ' ಎಂದರು. ಭಕ್ತಿಗೆ ಕೇವಲ ಭಕ್ತಿ ಬೇಕಷ್ಟೇ. ಭಕ್ತಿ ಇದ್ದರೆ ಭಕ್ತಿನಿಗೆ ಚೆಲುವು. ಆದರೆ ಆ ದೇವನಿಗೆ ಎಲ್ಲರೂ ಸಮಾನರು

ಹಾಗಾಗಿ ಆ ದೇವರು ಖಂಡಿತ ಪಕ್ಷಪಾತಿಯಲ್ಲ. ನನ್ನ ವಿಚಾರದಲ್ಲಿ ನ್ಯೂನತೆಗಳೇನಾದರೂ ಇದ್ದರೆ, ನಾ ತಿದ್ದಿಕೊಳ್ಳಲು ಸದಾ ಸಿದ್ಧ. ನಮಸ್ಕಾರ

ರವಿ ತಿರುಮಲೈ
"

(ಫೇಸ್ ಬುಕ್ಕಿನಲ್ಲಿ ಈ ಹೊತ್ತಿನವರೆಗೂ ದೊರೆತ ಪ್ರತಿಕ್ರಿಯೆಗಳಿವೆ:
https://www.facebook.com/myrathy/posts/686557708099362?notif_t=like_tagged)

6 ಕಾಮೆಂಟ್‌ಗಳು:

  1. ಆ ದೇವನಿಗೆ ಎಲ್ಲರೂ ಸಮಾನರು ...ಧನ್ಯವಾದಗಳು ಬದರಿ...

    ಪ್ರತ್ಯುತ್ತರಅಳಿಸಿ
  2. ಇಲ್ಲಿ ಬರೆದ ಕಾಮೆಂಟ್ ನ್ನು ಓದಿದ ಮೇಲೆ ನನ್ನ ಮನಸ್ಸಿನಲ್ಲು ಕೆಲವೊಂದು ಜಿಜ್ಞಾಸೆಗಳು ಉದ್ಭವಿಸಿದವು.

    ತಿರುಮಲೈರವರೆ ನಾನು ನಿಮ್ಮಷ್ಟು ದೊಡ್ಡವನಲ್ಲ, ತಿಳಿದವನು ಅಲ್ಲ ಆದರು ನನ್ನ ಮನಸಿನ ಗೊಂದಲಗಳನ್ನು ಹೊರ ಹಾಕುವ ಪ್ರಯತ್ನ ಮಾಡಿದ್ದೇನೆ. ನನ್ನ ಅನಿಸಿಕೆಯೇನೆಂದರೆ...

    ದೇವರು ಪಕ್ಷಪಾತಿಯು ಅಲ್ಲ, ಸಾಹುಕಾರನು ಅಲ್ಲ. ಅವ ಸರ್ವಶ್ರೇಷ್ಠ, ಸರ್ವೋತ್ತಮ, ಸರ್ವವ್ಯಾಪಿ. ಅವನಾರು ಎಂಬುದೆ ಪ್ರಶ್ನೆಯಾದರೆ ನಮ್ಮ ಬದುಕಿಗೆ, ನಮ್ಮ ಬುದ್ಧಿವಂತಿಕೆಗೆ ಅರ್ಥವುಂಟೆ...?

    ಈ ಜಗತ್ತೆಂದರೆ ದೇವರು, ನಮ್ಮ ನಂಬಿಕೆಯೇ ದೇವರು, ನಮ್ಮ ಅಸಹಾಯಕತೆಯನ್ನು ಕೇಳುವ ಕಲ್ಪನೆಯೇ ದೇವರು, ಎಲ್ಲರನ್ನು ಬದುಕಲು ಅಣಿಯಾಗಿಸುವ ಚೈತನ್ಯವೇ ದೇವದು. ಇದು ನನ್ನ ಅಭಿಪ್ರಾಯ.

    ಹಾಗೆ ಮುಂದುವರಿಯುತ್ತ, ಆ ಪರಮಾತ್ಮನಿಂದ ಹೊರಟ ಆತ್ಮ ಮತ್ತೆ ಆ ಪರಮಾತ್ಮನನ್ನೇ ಸೇರುವ ಮಾರ್ಗದಲ್ಲಿ ಪಾರು ಮಾಡಬೇಕಾದ ಹತ್ತಾರು ಎಡರು ತೊಡರುಗಳನ್ನು ದಾಟಲು ಬೇಕಾದ ಚುಕ್ಕಾಣಿಗಳು ಮಾತ್ರ. ಅಂದರೆ ಆತ್ಮದ ವಾಹನವೆಂದರೆ ಈ ನರ ಮೃಗಗಳೇ...? ಆ ಪರಮಾತ್ಮನಲ್ಲಿ ಲೀನವಾಗುವುದೇ ಎಲ್ಲಾ ಜೀವಿಗಳ ಉದ್ದೇಶ್ಯ ಎಂದು ಹೇಳಿದ್ದೀರಿ ಹೀಗೆಂದುಕೊಂಡರೆ ಬದುಕುವ ಕರ್ಮ ಎಲ್ಲಿಂದ, ಯಾಕೆ, ಯಾವ ಕಾರಣಕ್ಕೆ ಎನ್ನುವ ಅನುಮಾನ ಮತ್ತು ಇನ್ನೊಂದು ಪ್ರಶ್ನೆ ಉದ್ಭವಿಸುತ್ತದೆ. ಎಲ್ಲ ಕರ್ಮಗಳನ್ನು ಬಿಟ್ಟು ಕೇವಲ ಧ್ಯಾನದತ್ತ ನಮ್ಮ ಮನಸ್ಸನ್ನು ಕೇಂದ್ರಿ ಕರಿಸುವುದೊಂದೇ ಉಳಿಯಬೇಕಾಗುತ್ತದೆ ಅಲ್ಲವೆ...?

    ಎಲ್ಲ ಪ್ರಾಣಿಗಳೂ ಅವರವರ ಪೂರ್ವ ಕರ್ಮದನುಸಾರವಾಗಿ ಏನನ್ನು ಪಡೆಯಬೇಕೋ, ಎಷ್ಟನ್ನು ಪಡೆಯಬೇಕೋ ಮತ್ತು ಯಾವಾಗ ಪಡೆಯಬೇಕೋ ಆಯಾ ಸಮಯಕ್ಕೆ ಅಷ್ಟಷ್ಟನ್ನು ಪಡೆಯುತ್ತದೆ ಅಂದರೆ ಎಲ್ಲ ಪ್ರಾಣಿಗಳ ಆತ್ಮವೂ ಪೂರ್ವ ಜನ್ಮವನ್ನು ಪಡೆದಿರುತ್ತದೆಯೇ...? ಹಾಗಿದ್ದರೆ ಎಲ್ಲ ಕೆಲಸಗಳು ತೃಪ್ತಿದಾಯಕವಾಗಿ ಯಾವ ಪ್ರಾಣಿಯ ಬದುಕಿನಲ್ಲಿ ನಡೆಯುತ್ತದೆಯೋ ಆ ಪ್ರಾಣಿಗಳ ಆತ್ಮ ಹೊಸದಾಗಿ ರೂಪಗೊಂಡಿರುವುದೋ...?

    ನಮ್ಮ ಬದುಕಿನಲ್ಲಿ ಋಣಾತ್ಮಕವಾದ ಘಟನೆಗಳು ಸಂಭವಿಸಿದರೆ ಆಗ ನಾವು ನಮ್ಮೆಲ್ಲ ಬದುಕಿನ ಹೊಣೆಗಾರ ದೇವನೆಂದು ಅವನನ್ನು ಜರಿಯುವುದು ಅಸೂಯೆಯಿಂದ ತೆಗಳುವುದು ನಮ್ಮ ಹತಾಶೆಯ ಪರಮಾಧಿಯೇ ಹೊರತು ಬೇರೆನು ಅಲ್ಲ ಎನ್ನುವುದು ನನ್ನ ಅನಿಸಿಕೆ. ಯಾಕೆಂದರೆ ಉಳಿದವರನ್ನು ಜರಿದರೆ, ಹೊಣೆಯಾಗಿ ಬಿಂಬಿತರಾದವರು ಎಗರಿ ಉತ್ತರಿಸುವುದರಿಂದ ಜಗಳ, ಮನಸ್ತಾಪಕ್ಕೆ ಹೆದರಿ, ಇಂತವುಗಳಿಂದ ತಪ್ಪಿಸಿಕೊಳ್ಳಲು ಕಾಣದ ದೇವನನ್ನು ಜರಿಯುತ್ತಾರೆ. ಯಾಕೆಂದರೆ ಅವ ತಿರುಗಿ ಮಾತನಾಡಲಾರ, ಜಗಳವಾಡಲಾರ ಂಬುದು ಪೂರ್ವ ನಿಯೋಜಿತವಾಗಿ ತಿಳಿದಿದ್ದರಿಂದ.

    ಉಳ್ಳವರು ಶಿವಾಲಯ ಮಾಡುವರು' ಎಂದು ಬಸವಣ್ಣನವರು ಹೇಳುತ್ತಾ ' ಎನ್ನ ಕಾಲೇ ಕಂಬವಯ್ಯ, ಎನ್ನಾ ದೇಹವೆ ದೇಗುಲವಯ್ಯ ಶಿರವೇ ಹೊನ್ನ ಕಳಸವಯ್ಯಾ ' ಎಂದಿರುವುದು ಇಲ್ಲದವರ ಪರವಾಗಿ ಎತ್ತಿದ ದನಿ. ಏಕೆಂದರೆ ಅವರಿಗು ಗೊತ್ತು ಮನಸ್ಸೆಂಬ ಮರ್ಕಟದಿಂದ ಧ್ಯಾನ, ಪೂಜೆಯನ್ನು ಭಾವಪರವಶರಾಗಿ ಮಾಡಲು ಸಾಧ್ಯವಿಲ್ಲ ಎಂದು ತಿಳಿದಿದ್ದರಿಂದ ನಮ್ಮ ಭಕ್ತಿಯನ್ನು, ನಮ್ಮ ಅವಶ್ಯಕತೆಯನ್ನು ದೇವನಿಗೆ ತಲುಪಿಸಲು ಕಂಡುಕೊಂಡ ಮಾರ್ಗಗಳೇ ಈ ಹೋಮ, ಹವನ, ಅರ್ಚನೆ ಇತ್ಯಾದಿ. ಈ ಕರ್ಮಗಳನ್ನು ಮಾಡಿಸಲು ಮುಂದೆ ಬಂದ ಜನರ ಗುಂಪೇ ನಮ್ಮ ಬ್ರಾಹ್ಮಣರು. ಹಾಗೆಂದ ಮಾತ್ರಕ್ಕೆ ಬ್ರಾಹ್ಮಣರುಗಳು ದೇವರಲ್ಲ. ಆದರೆ ಅವರ ಕರ್ಯತತ್ಪರತೆ ಅವರನ್ನು ಗೌರವಿಸುವಂತೆ ಪ್ರೇರೇಪಿಸುತ್ತದೆ. ಬರ್ತ ಬರ್ತ ಅದು ಒಂದು ವೃತ್ತಿಯಾಗಿ ಸಮಾಜದ ಸಂಕೊಲೆಗಳಿಂದ ವಿದ್ಯಮಾನಗಳು ಬೇರೆ ಯಾದವೆ ಹೊರತು ಅದು ಅವರೆ ಬರೆದುಕೊಂಡ ಸ್ವಯಂಘೋಶಿತ ಬಿರುದಲ್ಲ. ಅಹಂ ಬ್ರಹ್ಮಾಸ್ಮಿ ಎಂದು ಸ್ವಾಮಿ ಜಗದ್ಗುರುಗಳಾದ ಶಂಕರಾಚಾರ್ಯರು ಹೇಳಿರುವುದು ದೇವರನ್ನು ನೋಡಲು ಬೆರೆಲ್ಲು ಹೋಗಬೇಕಾಗಿಲ್ಲ ಯಾಕೆಂದರೆ ಆ ಪರಮಾತ್ಮನ ಭಾಗವೇ ನಮ್ಮ ಈ ದೇಹದ ಆತ್ಮವಾಗಿರುವುದರಿಂದ ನಾನೆ ಬ್ರಹ್ಮ ಎಂದು ಹೇಳಿರುವುದರ ಉದ್ದೇಶವಾಗಿರಬಹುದಲ್ಲವೇ...? ಇದರಿಂದಾಗಿ ಶಿವಾಲಯ ಕಟ್ಟುವ, ಪುರೋಹಿತರನ್ನು ಸಂಪರ್ಕಿಸುವ ಗೋಜಿಗೆ ಹೋಗುವ ಕೆಲಸವಿಲ್ಲ.

    ಇವುಗಳ ಸುತ್ತ ಓಡಾಡಿದಾಗ, ಇವುಗಳನ್ನು ಆಳವಾಗಿ ಯೋಚಿಸಿದಾಗ ಮೋಡುವ ಗೊಂದಲಗಳಿಗೆ ಉತ್ತರ ಹುಡುಕಲು ಆಗದೆ ಹೋದ ಪ್ರಶ್ನೆಯೇ ದೇವರು. ನಂಬಿಕೆ, ಭಕ್ತಿ, ಧ್ಯಾನ, ಸಮಾದಾನ ಇದೆ ದೇವರೆಂಬ ಪದದ ಉತ್ಪತ್ತಿಗೆ ಕಾರಣ. ಇವುಗಳನ್ನು ಮೀರಿ ಒಬ್ಬ ದೇವರಿದ್ದಾನೆ ಅಂತಾದರೆ ಅವನಿಗೆ ಎಲ್ಲಾ ಪ್ರಾಣಿಗಳು ಸಮಾನರು. ಯಾಕೆಂದರೆ ಎಲ್ಲಾ ಪ್ರಾಣಿಗಳ ದೇಹದಲ್ಲು ಆತ್ಮವಿರುತ್ತದೆ, ಆ ಆತ್ಮವೆಂಬುದು ಆ ದೇವರ ಭಾಗವಲ್ಲವೆ..? ಹೀಗಿರುವಾಗ ಆ ದೇವರು ಸಾಹುಕಾರ, ಪಕ್ಷಪಾತಿಯಲ್ಲ.

    ಈ ಅಲ್ಪನ ಬುದ್ಧಿಗೆ ತಿಳಿದಂತೆ, ತೋಚಿದಂತೆ ಬರೆದಿದ್ದೇನೆ. ತಪ್ಪಿದ್ದರೆ ಕ್ಷಮಿಸಿ, ತಿಳಿಸಿ. ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  3. ಖಂಡಿತಾ ಅಲ್ಲ...!! ದೇವರ ದೃಷ್ಟಿಯಲ್ಲಿ ಎಲ್ಲರೂ ಒಂದೇ......!!!

    ಪ್ರತ್ಯುತ್ತರಅಳಿಸಿ
  4. ದೇವರು ಪಕ್ಷಪಾತಿ! ಯಾರು ತಮ್ಮ ಉದ್ಧಾರಕ್ಕೆ ತಾವೇ ಪ್ರಯತ್ನಿಸುತ್ತಾರೋ ಅವರ ಪರವಾಗಿರುತ್ತಾನೆ!!

    ಪ್ರತ್ಯುತ್ತರಅಳಿಸಿ
  5. ಮಾಡಿದ ಅಡುಗೆ ಉಣ್ಣ ಬೇಕು ಇದು ಜಗದ ಮತ್ತು ದೇವರ ನಿಯಮ.
    ಶಿವಗಂಗೆಯ ಒಳಕಲ್ ತೀರ್ಥದ ರೀತಿ ಅವರ ಬೊಗಸೆಗೆ ಸಿಕ್ಕಷ್ಟೇ ಲಭ್ಯ. ರವಿ ಗುರುಗಳು ಹೇಳಿದ ಪ್ರತಿ ಪದವೂ ಸತ್ಯ. ನಾ ಒಪ್ಪುತ್ತೇನೆ
    ಸೂಪರ್ ಸೂಪರ್ ನಿಮ್ಮ ಪ್ರಶ್ನೆ ಮತ್ತು ಅದಕ್ಕೆ ಗುರುಗಳಿಂದ ಸಿಕ್ಕ ವಿವರಣೆ ಎರಡು ಸೂಪರ್

    ಪ್ರತ್ಯುತ್ತರಅಳಿಸಿ