ಶನಿವಾರ, ಜುಲೈ 14, 2012

ಇತಿಹಾಸ ದಿಟವೇ?


ಇಂದು ನಾವು ಓದುತ್ತಿರುವ ಚರಿತ್ರೆಯು ನೂರಕ್ಕೆ ನೂರರಷ್ಟು ಸತ್ಯವೇ? 


ಇದು ನನ್ನನ್ನು ಕಾಡಿದ ದೊಡ್ಡ ಪ್ರಶ್ನೆ.

ಸ್ವಾತಂತ್ರ್ಯ ಪೂರ್ವ ಮತ್ತು ಆನಂತರದ ಚರಿತ್ರೆಯು ಎಷ್ಟೋ ಕಡೆ ’ಬರೆಸಿದ’ ಹಾಗೆ ಕಾಣುತ್ತದೆ.

ಪ್ರತಿ ಪುಟವೂ ನಿಜಾಯತಿ ಇಂದ ಕೂಡಿದ್ದರೆ,  ಸ್ವಾತಂತ್ರಾ ನಂತರದ ಭಾರತೀಯ ಇತಿಹಾಸವನ್ನು ನಾವು ಯಾಕೆ ಇದ್ದದ್ದನ್ನು ಇದ್ದ ಹಾಗೇ ಬೋಧಿಸುವುದಿಲ್ಲ?

ತುರ್ತು ಪರಿಸ್ಥಿತಿಯ ದಿನಗಳ ಬಗ್ಗೆ ನಮಗೆ ಯಾವ ತರಗತಿಯಲ್ಲೂ ಕಲಿಸುವುದೇ ಇಲ್ಲ!

ರಾಜಾಶ್ರಯದ ತೊತ್ತಿಗೆ ಅಥವಾ ಯಾವನೋ ಪೂರ್ವಾಗ್ರಹ ಪೀಡಿತ ನಮಗೆ ಬರೆದುಕೊಟ್ಟ ಸುಳ್ಳೇ ಇತಿಹಾಸವನ್ನೇ  ಇಂದಿಗೂ ಓದುತ್ತಿದ್ದೇವೆ ಅನಿಸುತ್ತದೆ.

ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನಿಜವಾದ ದೇಶ ಭಕ್ತರು ದಾಖಲಾಗದೇ ಅಲ್ಲೂ ರಾಜಕೀಯ ಹಿತಾಸಕ್ತರೇ ಪ್ರಕಾಶಕ್ಕೆ ಬಂದದ್ದು ನನಗೆ ಸೋಜಿಗ.

ಭಗತ್ ಸಿಂಗ್, ಸುಭಾಸ್ ಚಂದ್ರ ಬೋಸ್ ಅವರಂತಹ ಹೋರಾಟಗಾರರು ನಮಗೆ ಅಷ್ಟಾಗಿ ಗೋಚರಿಸುವುದೇ ಇಲ್ಲ.

ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರರನ್ನು ರಾಜ್ಯ ಸರ್ಕಾರವೇ ಸರಿಯಾಗಿ ಗುರುತಿಸಿಲ್ಲ.

ಛಪ್ಪನ್ನಾರು ದೇಶಗಳಿದ್ದದ್ದು ಕಡೆಗೆ ಪುಟ್ಟ ದೇಶವೇಕಾಯಿತು? ಯಾರು ಇದಕ್ಕೆ ಹೊಣೆಯಾದರು ಎಂಬುದು ಇಂದಿಗೂ ಅಪ್ರಸ್ತುತ!

ಸ್ವಾತಂತ್ರ್ಯ ಮನುಷ್ಯನ ವಿಕಸನಕ್ಕೆ ದಾರಿಯಾಗದೆ ಬರಿಯ ಭಾಷೆ, ಆರ್ಥಿಕ, ರಾಜಕೀಯ ಮತ್ತು ಬೌಗೋಳಿಕ ಗಡಿ ರೇಖೆಯಾದದ್ದು ಖೇದ.

ಅಂದಿನ ಅನಿವಾರ್ಯತೆಗಾಗಿ ರೂಪಗೋಂಡ ಕೇಂದ್ರಾಡಳಿತ ಪ್ರದೇಶಗಳು ಇಂದಿಗೂ ಖಂಡಿತ ಬೇಡದ ಗುರುತಿಸುವಿಕೆ.

ನಿಜವಾದ ಇತಿಹಾಸ ಇನ್ನಾದರೂ ಬೋಧನಾ ಸರಕಾದರೆ ಚೆನ್ನ.


(ಚಿತ್ರ ಕೃಪೆ : ಅಂತರ್ಜಾಲ)


6 ಕಾಮೆಂಟ್‌ಗಳು:

  1. ಇನ್ನೂ ಕೆಟ್ಟದು ಅಂದರೆ ,ರಿಸರ್ಚ್ ಮಾಡಿ ಸತ್ಯಕ್ಕೆ ಹತ್ತಿರವಾದ ಬರೆಯುವ ಬೈರಪ್ಪಅಂತವರನ್ನು ಮೂಲೆಗುಂಪು ಮಾಡಲು ಯತ್ನಿಸುವುದು.

    ಪ್ರತ್ಯುತ್ತರಅಳಿಸಿ
  2. ಬೇಕಾದದ್ದು ಕಡಿಮೆಯಾಗಿದೆ,
    ಅಗತ್ಯವಿಲ್ಲದ್ದು ಯಥೇಚ್ಛವಾಗಿದೆ!
    ಇವರೊಂದು ಹೇಳಿದರೆ ಕೇಸರೀಕರಣ ;
    ಅವರೊಂದು ಸೇರಿಸಿದರೆ ಬೇಸರಿಕರಣ!
    ಬೇಕಾದಂತೆಯೇ ಬೆರೆಸುತಿರುವರು;
    ಓದುವವರು ನಿಜವೆಂದೇ ಅರಿವರು!
    ಇದು ರಾಜಕೀಯ ಕೃಪಾಪೋಷಿತ ನಾಟಕ!!

    ಪ್ರತ್ಯುತ್ತರಅಳಿಸಿ
  3. ಇತಿಹಾಸದ ಬಗ್ಗೆ ಒಂದು ಕವಿತೆ ??? ಅಚ್ಚರಿ ಮೂಡಿಸಿತು.ಇತಿಹಾಸ ಇಂದು ಪರಸ್ಪರ ಹೊಡೆದಾಡಲು ಒಂದು ಆಯುಧವಾಗಿದೆ.ಕಾಸಿಗಾಗಿ ಇತಿಹಾಸ, ಹೊಟ್ಟೆಗಾಗಿ ಇತಿಹಾಸ, ಯಾರನ್ನೋ ಮೆಚ್ಚಿಸಲು ಇತಿಹಾಸ,ರಾಜಕೀಯಕ್ಕಾಗಿ ಇತಿಹಾಸ ಹೀಗೆ ಹಲವು ಬಗೆಯ ಇತಿಹಾಸಕಾರರಿಂದ ಇಂದು ನಿಜದ ಇತಿಹಾಸ ದುರ್ಬಿನು ಹಾಕಿ ಹುಡುಕಿದರೂ ಸಿಗದಂತೆ ಮಾಯವಾಗಿದೆ.ಯಾರಿಗೂ ಬೇಡದ ಇತಿಹಾಸ ಈ ಕವಿತೆಗೆ ಯಾಕೆ ಬೇಕಾಯಿತೋ ಕಾಣೆ .... ಅದು ಕವಿಯ ಒಳ ಮನಸಿನ ತಪ್ಪೋಪ್ಪಿಗೆಯೇ ?? ............ಆದರೂ ಬರೆವ ಸಾಹಸ ಮಾಡಿದ ಕವಿಗೆ ..........ಜೈ ಹೋ

    ಪ್ರತ್ಯುತ್ತರಅಳಿಸಿ
  4. ಇತಿಹಾಸವೂ ಸಹ ಭವಿಷ್ಯದಂತೆ ವಿಷಯ ವಿಸ್ಮಯ ...
    ಮುಂದೇನು ಎನ್ನುವುದನ್ನು ತಿಳಿಯುವುದು ಕಷ್ಟ...
    ಹಿಂದೆನಿತ್ತು ಎನ್ನುವುದು ಸಹ ಅಷ್ಟೇ ಅಚ್ಚರಿಯನ್ನು ಕೊಡುತ್ತದೆ...

    ಒಂದು ರೀತಿಯಲ್ಲಿ ಯಾವುದನ್ನು ಯಾರು ಬರೆಯುತ್ತಾರೋ ಅದು ನಿಜ
    ಮತ್ತು ಅದಕ್ಕಷ್ಟೇ ಆಧಾರಗಳನ್ನು ಹುಡುಕಿ ಅದು ನಿಜವೋ ಅಲ್ಲವೋ ..
    ಎನ್ನುವ ಸಂಶೋಧನೆಗಳನ್ನು ಮಾಡಿದ್ದಾರೆ ಮತ್ತು ಮಾಡುತ್ತಿದ್ದಾರೆ ...
    ಯಾವುದೋ ಒಂದು ಬೆಟ್ಟದಡಿಯಲ್ಲಿ ಹಳೆಯ ಅರಮನೆ ಹೂತು ಹೋಗಿದೆ
    ಮತ್ತು ಅಲ್ಲಿ ಯಾರ ಆಳ್ವಿಕೆ ಇತ್ತು ಹಾಗೂ ಎಷ್ಟು ವಜ್ರ , ಚಿನ್ನ , ಬೆಳ್ಳಿ , ಮುತ್ತುರತ್ನ ಹವಳದ ಒಡವೆಗಳು ಈಗಲೂ ಸಿಗುತ್ತದೆ ಎಂದರೆ .. ಆ ಬೆಟ್ಟವನ್ನೇ ಕಡಿದು , ಪುಡಿ ಪುಡಿ ಮಾಡಿ , ಕೊನೆಯಲ್ಲಿ ಏನೂ ಸಿಗದಿದ್ದರೂ ಸಹ ಕಟ್ಟಡಗಳಿಗೆ ಕಲ್ಲಾದರೂ ಸಿಕ್ಕಂತೆ ಆಗಲಿ ಎನ್ನುವ ಆಲೋಚನೆಯಲ್ಲಿ ಎಲ್ಲಾ ಬೆಟ್ಟಗುಡ್ಡಗಳ ಕಡಿದು ಹಾಕಿ , ನಿಜವಾದ ಇತಿಹಾಸವನ್ನೇ ಸ್ವಾರ್ಥ ಲಾಭಕ್ಕಾಗಿ ಸಂಶೋಧನಾ ಕಾರ್ಯದಲ್ಲಿ ರಾಜಕೀಯ ನಡೆಸುವ ಕಾಲವಿದು .. ಇಲ್ಲಿ ನಾವು ಏನನ್ನು ಓದಬೇಕು ಎಂದು ಆಲೋಚಿಸುತ್ತೆವೋ ಅದು ಶಾಲಾಕಾಲೇಜು ಪಠ್ಯಕ್ರಮದಲ್ಲಿ ಕೇವಲ ಪರಿಚಯ ಮಾಡಿಸುವ ವಿಷಯವಾಗಿ ಮಾತ್ರವೇ ಇರುತ್ತದೆ.. ಸಂಪೂರ್ಣ ಮಾಹಿತಿ ಅನ್ನೋದನ್ನು ಬೇರೆ ಕಡೆಯೇ ಪಡೆಯಬೇಕು ..
    ಕಾರಣ ಇತಿಹಾಸವೂ ಒಂದು ರೀತಿಯಲ್ಲಿ ಆಕರ್ಷಣೆಯ ವಿಚಾರ .. ಕೆಲವರಿಗೆ ರಾಜ ಮಹಾರಾಜರ ಕಥೆಗಳು ಬೇಕು , ಕೆಲವರಿಗೆ ದೇವಾಲಯಗಳು ಮತ್ತು ನೃತ್ಯಗಾರ್ತಿಯರ ಕಥೆಗಳು ಬೇಕು , ಇನ್ನೂ ಕೆಲವರಿಗೆ ಇತಿಹಾಸದಲ್ಲಿ ಕಳೆದು ಹೋಗಿದೆ ಎನ್ನುವ ವಸ್ತುಗಳ ಹುಡುಕುವ ಕಾರ್ಯದಲ್ಲಿ ಆಸಕ್ತಿ , ಮತ್ತೆ ಹಲವರಿಗೆ ಇತಿಹಾಸದ ರಾಜಕೀಯ ಬೇಕು , ಹಾಗೆಯೇ ಕೆಲವು ವಿಚಿತ್ರ ಘಟನೆಗಳ (ದೆವ್ವ , ಭೂತಗಳ , ಮಾಟ ಮಂತ್ರ ಯಂತ್ರ ತಂತ್ರಗಳ ತಿಳಿಯುವ ಕೋರಿಕೆ.. , ಇನ್ನೂ ಹಲವರಿಗೆ ಇತಿಹಾಸದಲ್ಲಿ ವಿಜ್ಞಾನದ ಪಾತ್ರ ಏನು .. , ಅದೇ ರೀತಿ ಇತಿಹಾಸದಲ್ಲಿ ಸಾಹಿತಿಗಳ , ಸಾಹಿತ್ಯದ (ವಿವಿಧ ಭಾಷೆಗಳು) ಹುಟ್ಟು ಮತ್ತು ಬೆಳವಣಿಗೆಯ ಹಂತ ಹಂತದ ಬದಲಾವಣೆ .. ಇದನ್ನೆಲ್ಲಾ ಯಾರಿಗೆ ಎಷ್ಟು ಆಸಕ್ತಿಯೋ , ಅದಕ್ಕೆ ಅನುಗುಣವಾಗಿ ಪಠ್ಯಕ್ರಮ ಸಿದ್ಧವಾಗುತ್ತದೆ .. ಯಾವುದೇ ವಿಚಾರವನ್ನು ಸತ್ಯ ಎಂದು ಹೇಳಿದಾಗ ಅಲ್ಲಿ ಒಂದು ಸಣ್ಣ ಸುಳ್ಳು ನಮಗರಿವಿಲ್ಲದಂತೆ ಸೇರಿರುತ್ತದೆ .. ಆದರೆ ಅದನ್ನು ಊಹೆಯ ಸತ್ಯ ಮತ್ತು ಸಂಶೋಧನೆಯ ಮಾಡಲು ಒಂದು ಆರಂಭ ಆಧಾರ ಎಂದು ಪರಿಗಣಿಸಿ ಒಪ್ಪಲೇಬೇಕಾಗುತ್ತದೆ .. ಅದುವೇ ಇತಿಹಾಸ ಮತ್ತು ಬದಲಾವಣೆ ಭವಿಷ್ಯ .. :)

    ಪ್ರತ್ಯುತ್ತರಅಳಿಸಿ