ಶನಿವಾರ, ಆಗಸ್ಟ್ 4, 2012

ಡಾ|| ರಾಜ್...

ಅಭಿಮಾನಿಗಳ ಕಣ್ಮಣಿ ಅಣ್ಣಾವ್ರು ನಿರಂತರವಾಗಿ ಪಾತ್ರದಿಂದ ಪಾತ್ರಕ್ಕೆ ಪರಕಾಯ ಪ್ರವೇಶ ಮಾಡುತ್ತಾ ಹೋದರು. ಅದು ಅವರ ಶಕ್ತಿಯು ಆಗಿತ್ತು. ನಟನೆಯಲ್ಲಿ ಶಿಸ್ತು, ಸಂಯಮ ಮತ್ತು ಗ್ರಹಿಕೆ ಅವರಿಗೆ ಒಲಿದು ಬಂದಿತ್ತು. ಯಾವುದಕ್ಕೂ ಬ್ರಾಂಡ್ ಆಗದೆ ಬಾಂಡ್ ನಿಂದ ಪಾಂಡುರಂಗನವರೆಗೂ ಜೀವತುಂಬುತ್ತಾ ಹೋದರು.

ಪ್ರಾಯಶಃ ಭಾರತೀಯ ಚಿತ್ರರಂಗದಲ್ಲಿ ಇಷ್ಟೊಂದು ವೈವಿಧ್ಯಮಯ ಪಾತ್ರಗಳಲ್ಲಿ ಕಾಣಿಸಿಕೊಂಡ ನಟ ಇನ್ನೊಬ್ಬರು ಖಂಡಿತ ಇರಲಾರರು. ರಾಕ್ಷಸ, ದೇವರು, ರಾಜ, ಅಮಾಯಕ, ಅಮರ ಪ್ರೇಮಿ, ತ್ಯಾಗಿ, ರೈತ, ಬಾಂಡ್, ಪೊಲೀಸ್, ಕಳ್ಳ, ಅಂಧ, ಹಳ್ಳಿ ಗಮಾರ, ನ್ಯಾಯವಾದಿ, ಇಂಗ್ಲೀಷ್ ಪ್ರೊಫೇಸರ್, ಮನೋರೋಗಿ ಹಂತಕ, ಸಾಮಾನ್ಯರಲ್ಲಿ ಸಾಮಾನ್ಯ, ಪತ್ರಕರ್ತ, ಜಗಳಗಂಟ, ವಯೋವೃದ್ಧ, ಹೀಗೆ! ಪಟ್ಟಿ ಮಾಡುತ್ತ ಕೂತರೆ ನೂರಾರು.

ಸಾಮಾಜಿಕ, ಪೌರಾಣಿಕ, ಕಾಲ್ಪನಿಕ, ಐತಿಹಾಸಿಕ ಯಾವ ಪ್ರಕಾರದಲ್ಲೂ ಅಲ್ಲಿ ರಾಜ್ ಪ್ರಯೋಗಶೀಲ.

ತೆರೆಯ ಮೇಲೆ ಯಾವತ್ತಿಗೂ ಧೂಮಪಾನ, ಮದ್ಯಪಾನ, ಸ್ತ್ರೀ ಪೀಡಕನಂತಹ ಪ್ರಚೋದನಕಾರಿ ಪಾತ್ರಗಳನ್ನು ನಟಿಸದ. ಬೇರೆ ಭಾಷೆಗಳಲ್ಲಿ ಹಣದ ಹೊಳೆಯೇ ಕರೆದರೂ ಕನ್ನಡ ಚಿತ್ರ ರಂಗವನ್ನು ಬಿಟ್ಟು ಹೋಗದ. ಕನ್ನಡ ಕೆಲಸವೆಂದರೆ ಉಸಿರೆಂದು ಹೋರಾಟಕ್ಕೆ ಧುಮುಕುತ್ತಿದ್ದ ಅವರ ಅಖಂಡ ಕನ್ನಡ ಪ್ರೇಮವೇ ನಮಗೆಲ್ಲ ಮಾದರಿ.

೧೯೯೨ ರಲ್ಲಿ ಅವರಿಗೆ "ನಾದಮಯ ಈ ಲೋಕವೆಲ್ಲ" (ಚಿತ್ರ: ಜೀವನ ಚೈತ್ರ) ಕ್ಕೆ ಹಿನ್ನಲೆ ಗಾಯನಕ್ಕೆ ರಾಷ್ಟ್ರಪ್ರಶಸ್ತಿ ಬಂತು. ೧೦ ಬಾರಿ ಫಿಲಿಂ ಫೇರ್ ಪ್ರಶಸ್ತಿ, ೯ ಬಾರಿ ನಾಯಕ ನಟ ನೆಗಾಗಿ ರಾಜ್ಯ ಪ್ರಶಸ್ತಿ ಹೀಗೆ ಅವರಿಗೆ ಒಲಿದು ಬಂದ ಪ್ರಶಸ್ತಿಗಳ ಮಹಾ ಪೂರವೇ ಇದೆ.

ಹಿಂದಿಯ ಮೇರು ಗಾಯಕ ಕಿಶೋರ್ ಕುಮಾರ್ ತಮ್ಮ ವೃತ್ತಿ ಬದುಕಿನಲ್ಲಿ ಕೆಲವು ಚಿತ್ರಗಳಲ್ಲಿ ನಟಿಸಿದ್ದೂ ಉಂಟು ಹಾಗೆಯೇ ತೆಲುಗಿನ ಡಾ|| ಭಾನುಮತಿ ರಾಮಕೃಷ್ಣ, ನಮ್ಮ ಅಭಿನವ ಭಾರ್ಗವ ಡಾ|| ವಿಷ್ಣುವರ್ಧನ್ ತಮ್ಮ ಸಿನಿಮಾಗಳಿಗಾಗಿ ಒಂದೆರಡು ಹಾಡು ಹಾಡಿದ್ದೂ ಇದ್ದೆ. ಆದರೆ ತಮ್ಮ ನಟನೆಯ ಮೂಲಕ ಜನಮನ ಗೆದ್ದ ರಾಜಣ್ಣ ಮತ್ತೊಮ್ಮೆ ಅತ್ಯುತ್ತಮ ಗಾಯಕರಾಗಿ ನಮ್ಮ ಮಾನಸದಲ್ಲಿ ನಿಂತಿದ್ದಾರೆ. ಅವರು ತಮ್ಮ ಸಿನಿಮಾಗಳಿಗೆ, ಇತರ ನಟರ ಸಿನಿಮಾಗಳಿಗೆ, ಭಾವಗೀತೆ ಮತ್ತು ಭಕ್ತಿ ಗೀತೆ ಎಂದು ಹಾಡಿದ ನೂರಾರು ಹಾಡುಗಳು ಇಂದಿಗೂ ನಾವು ಗುನುಗುನಿಸುತ್ತೇವೆ.

ಕೆಳ ಮನೆಯಿಂದ ತಾರಕಸ್ಥಾಯಿ, ಶುದ್ಧ ಶಾಸ್ತ್ರೀಯದಿಂದ ಪಾಶ್ಚಿಮಾತ್ಯ, ಮೆಲೋಡಿಯಿಂದ ಫಾಸ್ಟ್ ಬೀಟ್, ಯಾವುದಕ್ಕಾದರೂ ಅವರು ಸೈ! ಅದಕ್ಕೇ ಇಂದಿಗೂ ಪದ್ಮಭೂಷಣ, ದಾದಾ ಸಾಬ್ ಪಾಲ್ಕೆ ಪ್ರಶಸ್ತಿ ವಿಜೇತ, ಗಾನಗಂಧರ್ವ ಡಾ|| ರಾಜ್ ಕುಮಾರ್ ಅವರ ಹಾಡುಗಳೆಂದರೆ: "ಬಿಸಿ ಬಿಸಿ ಕಜ್ಜಾಯ, ರುಚಿ ರುಚಿ ಕಜ್ಜಾಯ, ತಗೋ ತಿನ್ನು ತಗೋ ತಿನ್ನು"...

15 ಕಾಮೆಂಟ್‌ಗಳು:

  1. ಅಣ್ಣಾವ್ರ ಬಗ್ಗೆ ಲೇಖನ..ಯಾವಾಗಲು ಸುಮಧುರ..ಸುಂದರವಾಗಿದೆ..
    ತನ್ನ ಮನಸಿನಂತೆ ನಡೆದರೆ...ಒಳ್ಳೆಯ ಪ್ರೋತ್ಸಾಹಕಾರರು ಇದ್ದಾರೆ (ವರದಪ್ಪ, ಚಿ. ಉದಯಶಂಕರ) ಇರಬಹುದು...
    ದೊಡ್ಡ ಮನಸಿಗೆ ಕಲಾಕಾರರ ರಾಜ್ಯದಲ್ಲಿ ಸದಾ ರಾಜ ನಮ್ಮ ಅಣ್ಣಾವ್ರು..
    ನನ್ನ ಜೀವನದಲ್ಲಿ ಬಂದು ಪ್ರೇರೇಪಣೆ ನೀದುತಿರುವ ಮೂರು ಅಣ್ಣ
    ೧. ನನ್ನ ಅಣ್ಣ (ನನ್ನ ಅಪ್ಪ ಅವರನ್ನು ಅಣ್ಣ ಅಂತಲೇ ಕರೆಯೋದು)
    ೨. ಬಾಲಣ್ಣ
    ೩. ರಾಜಣ್ಣ

    ಪ್ರತ್ಯುತ್ತರಅಳಿಸಿ
  2. ಬದರಿಯವರೇ;ಯಶವಂತಪುರದ'ಗೋಪಾಲ್'ಥೀಯೇಟರ್ ನಲ್ಲಿ ಐವತ್ತು ಪೈಸೆ ಕೊಟ್ಟು ಅಣ್ಣಾವರ ಚಿತ್ರಗಳನ್ನು ನೋಡುತ್ತಲೇ ಬಾಲ್ಯವನ್ನು ಕಳೆದವರು ನಾವು.ಆ ಸಣ್ಣ ವಯಸ್ಸಿನಲ್ಲಿ ಅವರ ಚಿತ್ರಗಳಲ್ಲಿ ಅವರು ತೋರುತ್ತಿದ್ದ ಮಾನವೀಯ ಮೌಲ್ಯಗಳು ನಮ್ಮ ಮನಸ್ಸಿನ ಮೇಲೆ ಅಗಾಧ ಪರಿಣಾಮ ಬೀರಿವೆ.ನಾಂದಿ ಚಿತ್ರದಲ್ಲಿನ ಅವರ ಹಾಡು "ಹಾಡೊಂದ ಹಾಡುವೆ,ನೀ ಕೇಳುಮಗುವೆ'ಕೇಳಿದಾಗ,
    ಇಂದಿಗೂ ಕಣ್ಣಲ್ಲಿ ನೀರು.

    ಪ್ರತ್ಯುತ್ತರಅಳಿಸಿ
  3. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  4. ಅಪ್ಪಾಜಿ ಅಂದ್ರೆ ನನಗಂತೂ, ತುಂಬಾ ಇಷ್ಟ. ಒಬ್ಬನೇ ಸೂರ್ಯ, ಒಬ್ಬನೇ ಚಂದ್ರ, ಒಬ್ಬರೇ ರಾಜಕುಮಾರ್. ಅವರ ಬಗ್ಗೆ ಎಷ್ಟು ಬರೆದರೂ ಅದು ಕಡಿಮೆಯೇ. ಚಿಕ್ಕದಾಗಿಯಾದರು ಚೊಕ್ಕದಾಗಿ ಬರೆದಿದಿರ. ಇದರಲ್ಲಿ ಇನ್ನೊಂದು ಅಂಶವನ್ನು ಸೇರಿಸಬಹುದಿತ್ತು, ಏನಂದ್ರೆ, ರೂಸ್ ವೆಲ್ಟ್, ಚರ್ಚಿಲ್, ರ ನಂತರ ಅಮೆರಿಕಾದ "ಕೆಂಟಕಿ ಕರ್ನಲ್" ಪ್ರಶಸ್ತಿ ಪಡೆದ ಏಕೈಕ ವ್ಯಕ್ತಿ ನಮ್ಮ ಅಪ್ಪಾಜಿ"
    ತುಂಬಾ ಚೆನ್ನಾಗಿದೆ ನಿಮ್ ಬ್ಲಾಗ್ :-)

    ಪ್ರತ್ಯುತ್ತರಅಳಿಸಿ
  5. ರಾಜಕುಮಾರ ಅವರಿಗೆ ಇದ್ದಂತಹ diction ಬೇರೆ ಯಾವ ನಟರಲ್ಲೂ ಇಲ್ಲ. ಕನ್ನಡನಾಡಿಗೆ ಅವರೊಬ್ಬ icon.

    ಪ್ರತ್ಯುತ್ತರಅಳಿಸಿ
  6. ಅವರ ಕೆಲವು ಪಾತ್ರಗಳಲ್ಲಿ ಬೇರೆಯವರನ್ನ ಕಲ್ಪಿಸಲೂ ಸಾಧ್ಯವಿಲ್ಲ.
    ಚೆನ್ನಾಗಿದೆ
    ಸ್ವರ್ಣಾ

    ಪ್ರತ್ಯುತ್ತರಅಳಿಸಿ
  7. ಅಣ್ಣಾವ್ರು ಅಭಿಮಾನಿಗಳ ದೇವರು . ನೇತ್ರದಾನ ಮಾಡಿ ಜನರಿಗೆ ಜಾಗೃತಿ ಮೂಡಿಸಿ ಮಾದರಿಯಾಗಿದ್ದು , ಎಷ್ಟೋ ನೊಂದ ಜೀವಗಳಿಗೆ ಆಸರೆಯಾಗಿದ್ದು , ಸೋಮಾರಿಗಳಿಗೆ ಸ್ಪೂರ್ತಿ ತುಂಬಿದ ಬಂಗಾರದ ಮನುಷ್ಯ ,ಅವರ ಬಗ್ಗೆ ಎಷ್ಟು ಹೇಳಿದರು ಕೂದಲೆಳೆಗೆ ಸಮ .
    ಒಂದೇ ಮಾತಲ್ಲಿ ಹೇಳಬೇಕಂದ್ರೆ ಅಣ್ಣಾವ್ರಿಗೆ ಅಣ್ಣಾವ್ರೆ ಸಾಟಿ , ಬದರಿ ಸರ್ ಒಂದು ಸುಂದರ ಲೇಖನ ಇಷ್ಟ ಆಯ್ತು....

    ಪ್ರತ್ಯುತ್ತರಅಳಿಸಿ
  8. ಅಣ್ಣಾವ್ರ ಬಗ್ಗೆ ಬೇರೆ ಮಾತು ಅಂತಾ ಯಾರೂ ಹೇಳೋದಿಲ್ಲಾ .. ಮಕ್ಕಳಿಂದ ಹಿಡಿದು ನೂರು ತಲುಪಿದ ವಯಸ್ಸಿನವರಿಗೂ ಅಚ್ಚುಮೆಚ್ಚು .. ಆದರೆ ಒಂದು ನಿಜವನ್ನು ಈಗ ಹೇಳಬಯಸುವೆ .. ಏನೆಂದರೆ ಈ ನಿಮ್ಮ ಲೇಖನ ಓದುವಾಗ , ಪಾತ್ರಗಳ ಪರಿಚಯ ಮಾಡಿಸುವಾಗ .. ಶಂಕರಣ್ಣ .. ನಮ್ಮ ಕರಾಟೆ ಕಿಂಗ್ ಶಂಕರ್ ನಾಗ್ ಅವರು ನೆನಪಾದರು .. ಸರ್ .. :)

    ಪ್ರತ್ಯುತ್ತರಅಳಿಸಿ