ಭಾನುವಾರ, ಸೆಪ್ಟೆಂಬರ್ 4, 2016

9ನೇ ವರ್ಷದ ಸಂಭ್ರಮ...

ಪ್ರಿಯ ಬ್ಲಾಗಿಗರೇ,

ನಾನು ಬ್ಲಾಗ್ ಶುರೂ ಮಾಡಿ ಭರ್ತೀ 9 ವರ್ಷ ತುಂಬಿತು ಎಂದು ಸಂಭ್ರಮಿಸಬೇಕೋ...
ಅಥವಾ ಈ ವರ್ಷ ಬರೇ ಮೂರೂ ಮುಕ್ಕಾಲು ಕವನಗಳನ್ನು ಬರೆದು ಪ್ರಕಟಿಸಿದೆ ಎಂದು ಹಲುಬಬೇಕೋ?
'ಅಳಲಾರದೇ.. ನಗಲಾರದೇ.. ತೊಳಲಾಡಿದೇ ಜೀವ!'

ಹಾಗೆ ನೋಡಿದರೆ, ಅರ್ಧ ದಶಕದ ಹಿಂದೆ ಬ್ಲಾಗ್ ಎಂದರೆ ಅದು ಹೆಮ್ಮೆಯ ವಿಚಾರ. ಬ್ಲಾಗ್ ಬರೆಯುವುದು, ಪ್ರಕಟಿಸುವುದು ಮತ್ತು ತವರಿನಲ್ಲಿ ಮಗಳಿಗೆ ಕಾದಂತೆ ಕಮೆಂಟುಗಳಿಗೆ ದಾರಿ ಕಾಯುವುದು ಆಹಾ! ನೆನಸಿಕೊಂಡರೆ ಈಗಲೂ ಪುಳಕವಾಗುತ್ತದೆ.

ಕಾಲ ಕ್ರಮೇಣ ಫೇಸ್ ಬುಕ್ ಹಾಗೂ ವಾಟ್ಸ್ ಆಪ್ ಭರಾಟೆಯಲ್ಲಿ ಬ್ಲಾಗ್ ಮಂಕಾಗುತಿದೆ ಎನಿಸಿದರೂ, ಬ್ಲಾಗ್ ತನ್ನತನ ಉಳಿಸಿಕೊಂಡೇ ಉಸಿರಾಡುತ್ತಿದೆ ಮತ್ತು ಮತ್ತೊಮ್ಮೆ ಸುವರ್ಣ ಯುಗಕ್ಕೂ ಮರಳಬಹುದೆನ್ನುವ ಏಕೈಕ ಆಸೆಯಲ್ಲಿ ನಾನೂ ಹಪಹಪಿಸುತ್ತೇನೆ.

ಹೀಗಿದ್ದೂ,
ಫೇಸ್ ಬುಕ್ ತೆಕ್ಕೆಯ 3ಕೆ ಗುಂಪಿನಲ್ಲಿ ಕವನ ಮತ್ತು ಕಥನ ಶೀರ್ಷಿಕೆ ಅಡಿಯಲ್ಲಿ ಬಹುಕಾಲ ನೂರಾರು ಬ್ಲಾಗುಗಳನ್ನು ಹಂಚಿಕೊಂಡ ಸಂತೃಪ್ತಿಯಂತೂ ಖಂಡಿತ ನನಗಿದೆ.

ಬ್ಲಾಗಿಗ ಮುಂಬೈನ ಕುಶಿ ಪ್ರಕಾಶನದವರ ದೊಡ್ಡ ಮನಸ್ಸಿನಿಂದ ನನ್ನ ಚೊಚ್ಚಲ ಕವನ ಸಂಕಲನವೂ ಬೆಳಕು ಕಂಡಿತು, ಇದಲ್ಲವೇ ಬ್ಲಾಗ್ ಔನತ್ಯ.

ಬ್ಲಾಗ್ ದೆಸೆಯಿಂದ ಕೋಣನಕುಂಟೆ to ಕುವೈತ್, ಧಾರವಾಡ to ಅಡಿಲೇಡ್, ವಿಜಯನಗರ ಸಾಮ್ರಾಜ್ಯ to ಮಲ್ಲತ್ತಹಳ್ಳಿ ಎನ್ನುವಂತೆ ಪೋಸ್ಟ್ ಹರಿದಾಡಿದವು, ಬೆಂಗಳೂರಲ್ಲಿ ಕೂತು ಕೂತೇ ನಾನೂ ಪಾವನವಾದೆ!
ಮೈಸೂರಂತೂ ಶ್ರೀರಂಗಪಟ್ಟಣದ ಮಾಹಿತಿ ಕೇಂದ್ರವಾಯಿತು. ಬೆಂಗಳೂರಿನ ಬ್ಲಾಗಿಗರು ಆಗಾಗ ದರ್ಶನ ಭಾಗ್ಯವನ್ನೂ ಕೊಟ್ಟರು.
ಭಟ್ಕಳ, ಕಾರ್ಗಲ್, ಹಾಸನ, ಚಿಕ್ಕಮಗಳೂರು, ಹೊಸಪೇಟೆ, ಶಿರಸಿ, ಭದ್ರಾವತಿ, ಶಿಢ್ಲಘಟ್ಟ, ನವ ದೆಹಲಿ, ದುಬೈಗಳಾದಿಯಾಗಿ ಕಾಣದ ಊರುಗಳು ಹೃದಯಕ್ಕೆ ಮತ್ತೂ ಹತ್ತಿರವಾದವು.
ವಯಸ್ಸಿನಂತರ ಮೀರಿ ಬ್ಲಾಗರುಗಳು ಗೆಳಯರಾದರು. ಆಪದ್ಭಾಂದವರೂ ಆದರು.

ಆದರೆ,
ಒಬ್ಬರ ಬ್ಲಾಗುಗಳನ್ನು ಇನ್ನೊಬ್ಬರು ಓದುತ್ತಲೇ ಇಲ್ಲ ಎಂಬ ಕೊರಗಿನೊಂದಿಗೆ, ಇನ್ನಷ್ಟು ಬರೆಯುವ ಉಮೇದಿಯಲ್ಲಿ, ನಿಮ್ಮ ಬೆನ್ನು ಹತ್ತಿದ ಬೇತಾಳನಾಗುತ್ತೇನೆ!

ಒಂಬತ್ತು ವರ್ಷ ನನ್ನನ್ನು ಪೊರೆದ ತಮಗೆ
'ಬ್ಲಾಗಿಗೆ ಮರಳಿ ಬನ್ನಿ' ಎನ್ನುವ ಬಿನ್ನಹದೊಂದಿಗೆ ಅನಂತ ನಮನಗಳು.
ಹಿರಿಯ ಬ್ಲಾಗಿಗ ಕೊಳಲು ಬ್ಲಾಗಿನ ಡಾ|| ಡಿ.ಟಿ.ಕೆ. ಮೂರ್ತಿಯವರು ರಚಿಸಿದ ನನ್ನ ಪೆನ್ಸಿಲ್ ಕೃತಿ

8 ಕಾಮೆಂಟ್‌ಗಳು:

  1. ನಾನಂತೂ ಬಂದೇ ಬರ್ತೀನಿ...
    ವಾಟ್ಸಪ್ಪು, ಫೇಸ್ಬುಕ್ಕುಗಳು ಎಷ್ಟೇ ಬೆಳೆದ್ರೂ ಬ್ಲಾಗ್ನೆಡೆಗಿನ ಮೋಹ ಕುಂದಿಲ್ಲ...
    ಶುಭಾಶಯಗಳು ಸರ್... ಬರೆಯುತ್ತಿರಿ...

    ಪ್ರತ್ಯುತ್ತರಅಳಿಸಿ
  2. ಅಭಿನಂದನೆಗಳು ಬದರಿ ಸರ್.... ನಾನು ಬ್ಲಾಗ್ ನಿಂದ ದೂರವಿರಲು ಫೇಸ್ ಬುಕ್ ಹಾಗೂ ವಾಟ್ಸಾಪ್ ಕಾರಣವಲ್ಲದೇ ಇದ್ದರೂ ತುಂಬಾ ಕಾಲದಿಂದ ಬ್ಲಾಗ್ ಕಡೆ ಹೋಗದೆ ಇರುವುದಂತು ನಿಜ...... ಬಹುಬೇಗ ನಿಮ್ಮೆದುರು ಹೊಸ ಬ್ಲಾಗ್ ಪೋಸ್ಟ್ ನೊಂದಿಗೆ ಹಾಜರಾಗುವೆ... ಧನ್ಯವಾದಗಳು ಸರ್....


    ಪ್ರತ್ಯುತ್ತರಅಳಿಸಿ
  3. ನಿಮ್ಮ ಬ್ಲಾಗ್ ಬರಹಕ್ಕೆ ಒಂಬತ್ತು ವರ್ಷ , ಆಹಾ ನಿಜಕ್ಕೂ ಖುಷಿಯಾಗುತ್ತೆ, ನಿಮ್ಮ ಹೆಸರು ಕೇಳಿ ಮೊದಲು ನೀವೂ ಬಹಳ ವಯಸ್ಸಾದ ಜ್ಞಾನವಂತ ಅಜ್ಜಾ, ಅಂತಾ ಬಹಳ ಹೆದರಿದ್ದೆ, ನಂತರ ನಿಮ್ಮ ದರ್ಶನ ನಿಮ್ಮ ಮಗುವಿನಂತಹ ಒಳ್ಳೆ ಮನಸಿನ ಪರಿಚಯ ಆಯ್ತು. ನಿಮ್ಮ ಒಂದೊಂದು ಬರಹವೂ ಕೂಡ ಕನ್ನಡ ನುಡಿಗೆ ಅದ್ಭುತ ಕೊಡುಗೆಯೇ ಸರಿ, ಕವಿತೆಯಲ್ಲಾಗಲಿ, ಲೇಖನದಲ್ಲಾಗಲಿ, ನೀವು ಬಳಸುವ ಕನ್ನಡ ಪದಗಳು ಅವುಗಳದೇ ಆದ ತಾಕತ್ತು ಹೊಂದಿರುತ್ತವೆ . ತುಂಟ ಮನಸಿನ ತುಂಟ ಪದಗಳನ್ನು ಬಳಸಿ ನಮ್ಮನ್ನು ನಕ್ಕುನಗಿಸುವ ಹಾಗೆ, ನಿಟ್ಟುಸಿರಿನ , ಕೋಪದ ಪದಗಳನ್ನು ಬಳಸಿ ನಮ್ಮ ಮನಸಿನಲ್ಲಿ ಅಳು ಹಾಗು ಸಿಟ್ಟನ್ನು ಬರಿಸಬಲ್ಲಿರಿ. ನಿಮ್ಮ ಮಾತು ನಿಜ ಫೆಸ್ ಬುಕ್ ದಾಸರಾದ ನಾವು ಬ್ಲಾಗನ್ನುಮರೆಯುತ್ತಿದ್ದೇವೆ, ಆದರೆ ಬ್ಲಾಗ್ ಲೋಕ ದಲ್ಲಿರುವ ಖುಷಿ ಫೆಸ್ ಬುಕ್ ನೀಡಲಾರದು. ನನ್ನ ಬ್ಲಾಗ್ ಬರವಣಿಗೆ ನಡೆಯುತ್ತಿದೆ ಈಗ. ಒಂಬತ್ತರ ಜ್ಞಾನವಂತ ಹುಡುಗ ಅಷ್ಟೇ ನಿಮ್ಮ ಬ್ಲಾಗು, ತೊಂಬತ್ತು ವರ್ಷ ಬಾಳಲಿ ಎಂಬ ಶುಭ ಹಾರೈಕೆ ನನ್ನದು. ನಿಮ್ಮ ಪ್ರೀತಿ ವಿಶ್ವಾಸ ಪಡೆದ ನಿಜಕ್ಕೂ ನಾನು ಧನ್ಯ. ನಿಮಗೆ ಶುಭವಾಗಲಿ.

    ಪ್ರತ್ಯುತ್ತರಅಳಿಸಿ
  4. ನಿಮ್ಮ ಮಾತು ನಿಜ ಪಲವಳ್ಳಿಯವರೇ, ನನಗೂ ಈ ಕೊರಗು ಇದೆ. ಒಮ್ಮೊಮ್ಮೆ ಹಿಂದಿನ ದಿನಗಳತ್ತ ಹಾರಿ ನಿಡುಸುಯ್ಯುವುದಿದೆ. ಬನ್ನಿ ಮತ್ತೊಮ್ಮೆ ಬ್ಲಾಗ್ ಪಯಣ ಮುಂದುವರೆಸೋಣ. ಕುಂಟುತ್ತಾ ಸಾಗಿರುವ ನನ್ನ ಬ್ಲಾಗಿಗೂ ಕಾಯಕಲ್ಪ ಮಾಡುತ್ತೇನೆ.

    ಪ್ರತ್ಯುತ್ತರಅಳಿಸಿ
  5. ಒಂಬತ್ತು ವರ್ಷಗಳವರೆಗೆ ನಮಗೆ ಸುಂದರವಾದ ವಿವಿಧ ಸಾಹಿತ್ಯವನ್ನು ನೀಡಿದ ನಿಮಗೆ ಧನ್ಯವಾದಗಳು. ಹುಟ್ಟುಹಬ್ಬದ ಶುಭಾಶಯಗಳು. ಗಣೇಶನು ನಿಮ್ಮ ಸಾಹಿತ್ಯಸೇವೆಯನ್ನು ನಿರ್ವಿಘ್ನವಾಗಿ ಮುಂದುವರೆಸಲಿ.

    ಪ್ರತ್ಯುತ್ತರಅಳಿಸಿ
  6. ಬದರಿ;ಶುಭಾಷಯಗಳು. ನಿಮ್ಮ ಪ್ರೀತಿಗೆ ,ನಿಮ್ಮರೀತಿಗೆ ನೀವೇ ಸಾಟಿ . ಯಾವುದೋ ಒಂದು ರೀತಿಯಲ್ಲಿ ನಿಮ್ಮ ಬರವಣಿಗೆ ಮುಂದುವರಿಸಿ.ನಮಸ್ಕಾರ.

    ಪ್ರತ್ಯುತ್ತರಅಳಿಸಿ
  7. ಶುಭವಾಗಲಿ ಸರ್.. ನಾನೀಗ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಬರುತ್ತಿಲ್ಲ. ಹಾಗಾಗಿ ಕ್ಷಮಿಸಿ

    ಪ್ರತ್ಯುತ್ತರಅಳಿಸಿ