ಮಂಗಳವಾರ, ಅಕ್ಟೋಬರ್ 8, 2013

ಅಮರಣಾಂತ ಉಪವಾಸ...

ಹನುಮಂತಪ್ಪ ಬಿಸಿಯೋ ಬ್ಯುಸಿ. ಎಡಕೈಯಲ್ಲಿ ಅವನ ನೋಟ್ ಪ್ಯಾಡ್ ಇಟ್ಟುಕೊಂಡು, ಬಲಗಿವಿಗೆ ಪೆನ್ ಸಿಕ್ಕಿಸಿಕೊಂಡು, ಇನ್ನೊಂದು ಕೈಯಲ್ಲಿ ಅದೇ ಲಡಕಾಸೀ ಚೈನಾ ಮೊಬೈಲನ್ನು ಕಿವಿಗೆ ಒತ್ತಿಕೊಂಡು ಅದೆಲ್ಲಿಗೋ ದಾಪುಗಾಲು ಹಾಕುತ್ತ ಹೊರಟಿದ್ದ.

ಮನೆಯಲ್ಲಿ ಅಕ್ಕಿ, ಬೇಳೆ ಇನ್ನಿತರೆ ಖಾಲಿ ಎಂದು ಹೆಂಡತಿ ಬೊಂಬಡಾ ಬಜಾಯಿಸುತ್ತಿದ್ದಳು ಬೆಳಗಿನಿಂದ. ಇದೊಳ್ಳೆ ಪೀಕಲಾಟಕ್ಕೆ ಬಂತಲ್ಲ, ಇವ್ಳದ್ದು ಇದ್ದದ್ದೇ ಎಂದು ಪಕ್ಕದ ಗಲ್ಲಿಯ ಪೆಟ್ಟಿ ಅಂಗಡಿಗೆ ಸಿಗರೇಟ್ ತರಲು ಅರ್ಜಂಟಾಗಿ ಹೊರಟಿದ್ದ ಗಿಡ್ಡಪ್ಪನಿಗೆ ಹನುಮಂತಪ್ಪ ಮೋರಿ ಸರ್ಕಲ್ಲಿನಲ್ಲಿ ಸಿಕ್ಕ.

ಮೊದಲೇ ಅದು ಮೋರಿ ಸರ್ಕಲ್ಲು, ಗಬ್ಬು ವಾಸನೆ. ಜೊತೆಗೆ ಮೂರು ನಾಲ್ಕು ದಿನಗಳಿಂದ ಸ್ನಾನವೂ ಕಾಣದ ಹನುಮಂತು. ಗಿಡ್ಡಪ್ಪನಿಗೆ ತಲೆ ಸುತ್ತಿ ಬಂದಂತಾಯಿತು.

ಗಿಡ್ಡಪ್ಪನನ್ನು ನೋಡಿದ್ದೇ ಅವನ ಮುಖ ಅರಳಿತು. ಗಿಡ್ಡಪ್ಪನೂ ನಿಂತ.

ಹನುಮಂತಪ್ಪ ಯಾರಿಗೋ "ಐನೂರು ಜನ, ಚಿತ್ರಾನ್ನ, ಮೊಸರನ್ನ, ಮಸಾಲ್ ವಡೆ, ಹಂಗೇ ನೀರೂ" ಅಂತಿದ್ದ.

ಸಮಾಜ ಸೇವಕ ಯಾವುದೋ ಕಾರ್ಯಕ್ರಮದ ತಯಾರಿಯಲ್ಲಿದ್ದಾನೆ ಅನಿಸಿತು ಗಿಡ್ಡಪ್ಪನಿಗೆ.

ಅವನು ಮಾತು ಮುಂದುವರೆಸಿದ್ದ "ಇಸ್ಕೂಲ್ ಮುಂದ್ಗಡೆ ಕೂರ್ತಾರೆ, ಹಿಂದಾಗಡೆ ಕಕ್ಕೋಸು ಐತಲ್ಲ ಅದರ ಬಾಜೂದಾಗೇ ನೀವು ಊಟ ಮಡಿಕ್ಕಳ್ಳಿ" ಅಂತೇಳಿ ಮೊಬೈಲ್ ಆಫ್ ಮಾಡಿದ.

"ಎನ್ಸಾ ಸಮಾರಂಭ?"
"ನಮ್ ಸಾಸಕರು ಊರಾಗೆ ಅನ್ನದ ಬರ ಬಂದೈತಿ ಅಂತ ಸಾಲೆ ಮುಂದ್ಗಡೆ ಅಮರಣಾಂತ ಉಪವಾಸ ಕೂರ್ತವ್ರೆ, ನಂದೇಯಾ ಮ್ಯಾನೇಜ್ಮೆಂತು"
"ಮತ್ತೆ, ಅದೇನೋ ಚಿತ್ರಾನ್ನ ತಗೋಬನ್ನಿ ಅಂತಿದ್ದೇ"
"ಓ ಅದಾ ಈ ಅಮರಣಾಂತ ಉಪವಾಸ ಫುಲ್ ಡೇ ಅಲ್ಲವ್ರ. ಬಂದೋರಿಗೆ ಒಟ್ಟೆಗೆ ಬ್ಯಾಡ್ವಾ ಮತ್ತೆ"
"ಅದ್ಸರಿ ಎಂ.ಎಲ್.ಏ ಅವರಿಗೆ?"
"ಒಳ್ಳೆ ಮಾತೇಳಿದ್ರಿ ಸಾಮಿ, ಸಾಸಕರಿಗೆ ಚಿತ್ರಾನ್ನವೇ? ಮಕದ್ ಮ್ಯಾಗೆ ಉಗ್ದಾರು! ಅವರಿಗೆ ಇಸ್ಕೂಲ್ ರೂಮಿನಾಗೆ ನಾಟಿ ಕೋಳಿ ಸಾರ್, ಮುದ್ದೆ ಹಂಗೆ ಮಟನ್ ಚಾಪ್ಸ್ ಏಳೀನಿ, ನೀವು ಬರ್ರಲ" ಅಂತ ದೇಸಾವರಿ ನಗೆ ನಕ್ಕ.

ಮತ್ತೆ ಅವನ ಮೊಬೈಲ್ ರಿಂಗ್ ಆಯಿತು. ಯಾರಿಗೋ "ಹಂಗೇ ಒಸಿ ಸವ್ತೇ ಕಾಈ, ಈರುಳ್ಳಿ ತತ್ತಾರ್ಲ" ಎಂದು ಗಿಡ್ಡಪ್ಪನನ್ನು ಅಲ್ಲೇ ಬಿಟ್ಟು ಮುನ್ನಡೆದ.

ಐಟ್ಲಗ, ಒಳ್ಳೆ ’ಅಮರಣಾಂತ ಉಪವಾಸ’ ಅಂದ್ಕೊಂಡ ಗಿಡ್ಡಪ್ಪ ಪೆಟ್ಟಿ ಅಂಗಡಿ ಕಡೆ ತಿರುಗಿದ.


(
Picture Credit: Google Image Search – No copyright violations intended.)

19 ಕಾಮೆಂಟ್‌ಗಳು:

  1. "ಆಚೆ ಮನೆ ಸುಬ್ಬಮ್ಮಂಗೆ ಏಕಾದಶಿ ಉಪವಾಸ ಎಲ್ಲೋ ಸ್ವಲ್ಪ ತಿನ್ತಾರಂತೆ ಉಪ್ಪಿಟ್ಟು ಅವಲಕ್ಕಿ ಪಾಯಸ" ಎನ್ನುವ ಒಂದು ಹಳೆಯ ಹಾಡು ಜ್ಞಾಪಕಕ್ಕೆ ತರುವಂತ ವಿಡಂಬನೆ,ಚೆನ್ನಾಗಿದೆ .

    ಪ್ರತ್ಯುತ್ತರಅಳಿಸಿ
  2. ಮೃಷ್ಟಾನ್ನದ ಹತ್ತಿರ ಉಪ-ವಾಸವಷ್ಟೇ (ಹತ್ತಿರ ವಾಸ). ಸುಳ್ಳಿನ ಉಪವಾಸ ಮಾಡುವ ರಾಜಕೀಯ ಧುರೀಣರಿಗೆ ಹಿಡಿದ ಕನ್ನಡಿ. ಚೆನ್ನಾಗಿದೆ.

    ಪ್ರತ್ಯುತ್ತರಅಳಿಸಿ
  3. ನಿಮ್ಮ ಲೇಖನ ವಾಸ್ತವಕ್ಕೆ ಹಿಡಿದ ಕೈಗನ್ನಡಿಯಂತಿದೆ.

    ಪ್ರತ್ಯುತ್ತರಅಳಿಸಿ
  4. ವಾಸ್ತವ ದರ್ಶನ
    ಈಗ ಆಂಧ್ರ ಕ್ಕಾಗಿ ಉಪವಾಸ ಮಾಡ್ತಿದಾರಲ್ಲ :)

    ಪ್ರತ್ಯುತ್ತರಅಳಿಸಿ
  5. ಸಾರ್ ನೀವು ಯಾವಾಗ ’ಅಮರಣಾಂತ ಉಪವಾಸ’ ಮಾಡ್ತೀರ ಹೇಳಿ ನಾನು ಬರ್ತೀನಿ ಜೊತೆಗೆ, ಹ ಹ ಹ ಸೂಪರ್ ಸರ್, ಬೊಂಬಾಟ್ ನಗೆಹಬ್ಬ.

    ಪ್ರತ್ಯುತ್ತರಅಳಿಸಿ
  6. ಬದರಿನಾಥ್ ಅವರೇ,

    ಉಪವಾಸ ಸಾಂಗವಾಗಿತ್ತು :)
    ಕೊನೆಗೂ ನೆನಪು ಉಳಿದಿದ್ದು ಮೊಸರನ್ನ ಮಾಸಲೇ ವಡೆ !

    ಅಂದಾಗೆ ೫ ವರ್ಷ ಪೂರೈಸಿದಕ್ಕೆ ಅಭಿನಂದನೆಗಳು...

    ಪ್ರತ್ಯುತ್ತರಅಳಿಸಿ
  7. ಹ್ಹ ಹ್ಹ ಹ್ಹಾ! ಒಳ್ಳೇ ಉಪವಾಸ! ನಾನೂ ನಮ್ಮ ಮನೆಯಲ್ಲಿ ಏಕಾದಶಿ ಮಾಡುವುದು ಹೀಗೇ!!

    ಪ್ರತ್ಯುತ್ತರಅಳಿಸಿ
  8. ಉಪವಾಸಗಳು ಅದನ್ನ ಆಚರಿಸುವವನ ಹೊಟ್ಟೆತುಂಬಿಸ್ತದೆ ಹೊರತು ಸಮಸ್ಯೆಗೆ ಪರಿಹಾರವನ್ನಲ್ಲ ಬದರಿ ಅಣ್ಣ ಒಳ್ಳೆಯ ವಿವರಣೆ

    ಪ್ರತ್ಯುತ್ತರಅಳಿಸಿ
  9. ರಾಜಕಾರಣಿಗಳು ಹಿಂಗೆ ಮಾಡೋದು ಹಹಹ ಸಕ್ಕತ್ತಾಗಿ ಬರೆದಿದ್ದೀರಿ

    ಪ್ರತ್ಯುತ್ತರಅಳಿಸಿ
  10. ನಮ್ಮ ಹಿಂದೂ ಸಮಾಜದಲ್ಲಿ ಉಪವಾಸ ಅಂದ್ರೆ ಇದೇ ತಾನೆ ಸರ್ :)

    ಪ್ರತ್ಯುತ್ತರಅಳಿಸಿ
  11. ಭಾಷಣಕ್ಕೆ ಉಪವಾಸ.. ಹೊಟ್ಟೆಗೆ ಇರುವುದೇ ಸಿಕ್ಕ ಸಿಕ್ಕ ಉಪಹಾರ ಎನ್ನುವಂತೆ ಗುರುಶಿಷ್ಯರು ಚಿತ್ರದಲ್ಲಿ ಮುಸುರಿ ಹೇಳುತ್ತಾರೆ ಊಟವಿಲ್ಲ ಊಟದಷ್ಟೇ ಉಪಹಾರ.. ಭಾಷ ಪ್ರಯೋಗ ಅದಕ್ಕೆ ತಕ್ಕಂತೆ ಒದಗಿ ಬರುವ ಹಾಸ್ಯ ಪ್ರಯೋಗ ಸೂಪರ್ ಬದರಿ ಸರ್ ಇಷ್ಟವಾಯಿತು

    ಪ್ರತ್ಯುತ್ತರಅಳಿಸಿ